ಯುವ ಆಪದ್ ಮಿತ್ರ ತರಬೇತಿಯಲ್ಲಿ ಶೌರ್ಯ ಕಾರ್ಯಕ್ರಮ

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧೀಕಾರ, ಸ್ಕೌಟ್ಸ್ ಗೈಡ್ಸ್, ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಯುವ ಆಪದ್ ಮಿತ್ರ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವು ಮಂಗಳೂರಿನ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು.

ಪ್ರಾಕೃತಿಕ ದುರಂತಗಳು ಸಂಭವಿಸಿದಾಗ ಸಂತ್ರಸ್ತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಕಳೆದ ನಾಲ್ಕು ದಶಕಗಳಲ್ಲಿ ನೀಡಿದ ಸ್ಪಂದನೆಗಳು, ಹಣಕಾಸಿನ ನೆರವು, ಮೂಲ ಸೌಕರ್ಯ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಪ್ರಾಕೃತಿಕ ದುರಂತಗಳು ಸಂಭವಿಸಿದಾಗ ತಕ್ಷಣ ನೆರವಿಗೆ ಸಮುದಾಯದ ಭಾಗವಹಿಸುವಿಕೆಗೆ ಪೂರಕವಾಗಿ ವಿಪತ್ತು ನಿರ್ವಹಣಾ ಘಟಕಗಳನ್ನು ಸ್ಥಾಪಿಸಿರುವ ಬಗ್ಗೆ ಮಾಹಿತಿ ನೀಡಲಾಯಿತು.
ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಉದ್ದೇಶ, ಘಟಕಗಳ ರಚನೆ, ಸಮಿತಿಯ ರಚನೆ, ಸ್ವಯಂಸೇವಕರ ಆಯ್ಕೆ, ವಿಪತ್ತು ನಿರ್ವಹಣಾ ಹಾಗೂ ಸಾಮಾಜಿಕ ಸೇವೆಗಳು, ವಿಪತ್ತಿಗೆ ಮೊದಲು, ವಿಪತ್ತು ಅವಧಿಯಲ್ಲಿ ಮತ್ತು ವಿಪತ್ತು ನಂತರದಲ್ಲಿ ಸ್ವಯಂಸೇವಕರ ಕಾರ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.

ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ್ ತರಬೇತಿ ನೀಡಿದರು. ಶೌರ್ಯ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಪದವಿ ಕಾಲೇಜಿನ 350 ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.

ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಲತಾ ಮತ್ತು ಶ್ರೀ ಪ್ರತಿಮ್ ಇವರು ಕಾರ್ಯಕ್ರಮ ಸಂಯೋಜಿಸಿದರು.