
ಕುಡಿಯುವ ನೀರಿನ ಬಾವಿಯನ್ನು ಸ್ವಚ್ಚಗೊಳಿಸುವ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ ವಿಟ್ಲ ತಾಲ್ಲೂಕಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಅಳಿಕೆಯ ಸ್ವಯಂಸೇವಕರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಚಿಸಲಾದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಲ್ಲಿ ಕಳೆದ 6 ವರ್ಷಗಳಿಂದ ಸ್ವಯಂಸೇವಕರು ಸಾಮಾಜಿಕ ಹಾಗೂ ವಿಪತ್ತು ನಿರ್ವಹಣಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದು, ಸಾಮಾಜಿಕ ಸೇವಾ ಚಟುವಟಿಕೆಗಳ ಭಾಗವಾಗಿ ಕುಡಿಯುವ ನೀರಿನ ಬಾವಿಯ ಸ್ವಚ್ಚತಾ ಶ್ರಮದಾನ ನಡೆಸಿರುತ್ತಾರೆ.

ಅಳಿಕೆಯ ದೀಪಕ್ ಎನ್ನುವವರ ಮನೆಯ ಕುಡಿಯುವ ನೀರಿನ ಬಾವಿಯಲ್ಲಿ ಕಳೆದ ಮಳೆಗಾಲದಲ್ಲಿ ಮಣ್ಣು ಕುಸಿದು ಆಳ ತಗ್ಗಿದ್ದು, ಹೂಳು ತೆರವು ಮಾಡುವ ಅವಶ್ಯಕತೆ ಇದ್ದುದರಿಂದ ದೀಪಕ್ ರವರು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರ ಸಹಕಾರವನ್ನು ಕೇಳಿಕೊಂಡಿದ್ದರು.

ಮನವಿಗೆ ಸ್ಪಂದಿಸಿದ ಶೌರ್ಯ ತಂಡದ ಸ್ವಯಂಸೇವಕರು ತಾಲ್ಲೂಕು ಯೋಜನಾಧಿಕಾರಿಯವರಾದ ಸುರೇಶ್ ಹಾಗೂ ವಲಯ ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಬಾವಿಯ ಸ್ವಚ್ಚತಾ ಶ್ರಮದಾನ ನಡೆಸಿದ್ದಾರೆ. ಸ್ವಯಂಸೇವಕರ ಸಹಕಾರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ದೀಪಕ್ ರವರ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.
ಶೌರ್ಯ ಘಟಕದ ಸ್ವಯಂಸೇವಕರಾದ ರವೀಶ್, ವಿನೋದ್ , ಗಣೇಶ್, ಲಕ್ಷ್ಮಣ, ಕುಶಾಲಪ್ಪ, ರಾಜೇಂದ್ರ ರೈ, ದೀಪಕ್ ಶ್ರಮದಾನದಲ್ಲಿ ಭಾಗವಹಿಸಿದ್ದರು.