ಬೆಳ್ತಂಗಡಿ ತಾಲ್ಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕ ಎಂಬಲ್ಲಿ ಕಾಡಾನೆ ದಾಳಿಗೆ ದಿನಗೂಲಿ ಕಾರ್ಮಿಕರೊಬ್ಬರು ಬಲಿಯಾದ ದಾರೂಣ ಘಟನೆ ಸಂಭವಿಸಿದೆ. ಮೃತರನ್ನು ಇಡ್ಮಾಲು ನಿವಾಸಿ ಬಾಲಕೃಷ್ಣ ಗೌಡ(56) ಎಂದು ಗುರುತಿಸಲಾಗಿದೆ.

ಬಾಲಕೃಷ್ಣ ಗೌಡ ರವರು ಎಂದಿನಂತೆ ಕೆಲಸ ಮುಗಿಸಿ ಸಂಜೆ ಮನೆಗೆ ಬರುವಾಗ ಕಾಡಾನೆಯೊಂದು ದಾಳಿ ನಡೆಸಿದೆ. ರಾತ್ರಿ ಎಷ್ಟು ಹೊತ್ತಾದರೂ ಮನೆಗೆ ಬರದೇ ಇರುವುದನ್ನು ಗಮನಿಸಿದ ಕುಟುಂಬದವರು ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ.
ಹುಡುಕಾಟ ನಡೆಸುತ್ತಿದ್ದಾಗ ಬಾಲಕೃಷ್ಣ ವರು ಧರಿಸಿದ್ದ ರೇನ್ ಕೋಟ್ ಮತ್ತು ಟೊಪ್ಪಿ ಹರಿದ ಸ್ಥಿತಿಯಲ್ಲಿ ರಸ್ತೆಯ ಬದಿಯಲ್ಲಿ ದೊರೆತಿದ್ದು ಅಲ್ಲಿಯೇ ಸಮೀಪದಲ್ಲಿ ಕಾಡಾನೆಯ ಹೆಜ್ಜೆ ಗುರುತುಗಳು ಕಂಡುಬಂದಿತ್ತು. ನಂತರ ಸುತ್ತಲಿನ ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶಿಶಿಲ-ಅರಶಿನಮಕ್ಕಿಯ ಸದಸ್ಯರಾದ ಅವಿನಾಶ್ ಭಿಡೆ, ರಮೇಶ್ ಭೈರಕಟ್ಟ ಅವಿನಾಶ್ ಭಿಡೆ, ಕೃಷ್ಣಪ್ಪಗೌಡ ಮುಚ್ಚಿರಡ್ಕ, ಶೀನಪ್ಪ ನಾಯ್ಕ್ ಮುಚ್ಚಿರಡ್ಕ, ಚೇತನ್ ರೆಖ್ಯ ಇವರು ಪೊಲೀಸ್ ಇಲಾಖೆಯೊಂದಿಗೆ ಮೃತ ದೇಹ ತೆರವು ಕಾರ್ಯಾಚರಣೆಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ.
ಸಹಾಯಕ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್, ಉಪ್ಪಿನಂಗಡಿ ವಲಯ ರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ, ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ ಗಾಣಿಗೇರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.