
ಧಾರವಾಡ, ಅಗಸ್ಟ್ 12: ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಧಾರವಾಡದ ತಾಲ್ಲೂಕಿನ ಹೊಸಯಲ್ಲಾಪುರ ಬಳಿಯ ಮನೆಯೊಂದು ಮಧ್ಯ ರಾತ್ರಿಯಲ್ಲಿ ಕುಸಿದಿದೆ. ವಾರಗಳಿಂದ ಆಗ್ಗಿಂದಾಗ್ಗೆ ಸುರಿಯುತ್ತಿರುವ ಮಳೆಯಿಂದ ಗೋಡೆಗಳು ನೆನೆದು ಕುಸಿತ ಕಂಡಿದೆ.ರೆಹಾನಾ ಔರಂಗ್ ಅವರ ಮನೆ ಇದಾಗಿದ್ದು ಕುಸಿತದ ವಿಷಯ ತಿಳಿದ ‘ಧರ್ಮಸ್ಥಳ ಸೇವಾ’ ವಿಪತ್ತು ನಿರ್ವಹಣೆ, ನುಗ್ಗಿಕೇರಿ ಘಟಕದ ಸ್ವಯಂಸೇವಕಿ ಶ್ರೀಮತಿ ಮಂಜುಳಾ ಅವರು ಮನೆ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.ಹಳೆಯ ಮನೆ ಅದಾಗಿದ್ದು ನೀರಿನಿಂದ ನೆನೆದ ಕಾರಣಕ್ಕೆ ಗೋಡೆಗಳು ಕುಸಿದಿದ್ದವು. ಪರಿಣಾಮ ಅಡುಗೆ ಮನೆಯಲ್ಲಿ ಇಟ್ಟಿಗೆಗಳು, ಮಣ್ಣಿನ ರಾಶಿ ಬಿದ್ದು ಸಮಸ್ಯೆ ಆಗಿತ್ತು. ಇದನ್ನು ಗಮನಿಸಿದ ವಿಪತ್ತು ನಿರ್ವಹಣಾ ಸಂಯೋಜಕಿ ಸ್ವಚ್ಚತಾ ಕಾರ್ಯಕ್ಕೆ ಆ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ನುಗ್ಗಿಕೇರಿ ಘಟಕದ ಸ್ವಯಂಸೇವಕರಿಗೆ ದೂರವಾಣಿ ಕರೆ ಮಾಡಿದ್ದಾರೆ. ಕೂಡಲೇ ಸ್ಪಂದಿಸಿದ ಸ್ವಯಂಸೇವಕರು ಸ್ಥಳಕ್ಕೆ ಧಾವಿಸಿ ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಯುವ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಕೊಂಡ ಸ್ವಯಂಸೇವಕರು ಮನೆಯೊಳಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವುದು, ಇಟ್ಟಿಗೆಗಳನ್ನು ಜೋಡಿಸಿಡುವುದು, ಕಟ್ಟಿಗೆಯ ಗಳಗಳನ್ನು ವರ್ಗಾಯಿಸುವ ಕೆಲಸ ಮಾಡಿರುತ್ತಾರೆ.ಕೆಲಸ ನಿರ್ವಹಿಸಲು ಅಗತ್ಯವಿರುವ ಸಲಕರಣೆಗಳನ್ನು ಮಾದೇವ ಗೋವನಕೊಪ್ಪ ಅವರು ನೀಡಿರುತ್ತಾರೆ. ಸಂಯೋಜಕಿ ಶ್ರೀಮತಿ ಮಂಜುಳಾ ದಂಡಪ್ಪನವರ್ ಅವರ ನೇತ್ರತ್ವದಲ್ಲಿ ಈ ಸೇವಾಕಾರ್ಯ ನಡೆಸಲಾಯಿತು. ಸ್ವಯಂಸೇವಕರಾದ ಮಂಜುನಾಥ್, ರಾಜೇಶ್, ಸುರೇಶ, ಪ್ರಶಾಂತ್, ಮಂಜುನಾಥ್ ಸೇವಾಕಾರ್ಯದಲ್ಲಿ ಪಾಲ್ಗೊಂಡಿದ್ದರು.
