ಜೇವರ್ಗಿ, ಮೇ 30, 2026: ಮಳೆಗಾಲದಲ್ಲಿನ ವಿಪತ್ತುಗಳ ನಿರ್ವಹಣೆಗೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ತುರ್ತು ಸ್ಪಂದನಾ ತಂಡವನ್ನು ರಚನೆ ಮಾಡಲಾಯಿತು.
ಕಳೆದ 3 ವರ್ಷಗಳಿಂದ ಜೇವರ್ಗಿ ತಾಲ್ಲೂಕಿನಲ್ಲಿ ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಮತ್ತು ವಿವಿಧ ಪರಿಣತರಿಂದ ತರಬೇತಿ ಪಡೆದಿರುವ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಕಾರ್ಯಾಚರಿಸುತ್ತಿದ್ದು ನೂರಾರು ವಿಪತ್ತು ನಿರ್ವಹಣೆ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.

ಪ್ರಸ್ತುತ ವರ್ಷದಲ್ಲಿ ವಿಪತ್ತುಗಳಿಗೆ ತುರ್ತು ಸ್ಪಂದನೆ ನೀಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರಿ ಅನಿಲ್ ಕುಮಾರ್ ಎಸ್.ಎಸ್ ರವರು ಹಾಗೂ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್. ವಿ.ಪಾಯ್ಸ್ ರವರ ಮಾರ್ಗದರ್ಶನದಂತೆ ತುರ್ತು ಸ್ಪಂದನಾ ತಂಡವನ್ನು ರಚನೆ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ವಸಂತ್ ಗೌಡ ಇವರು ಕಾರ್ಯಕ್ರಮವನ್ನು ಉದ್ಘಾಟನೆ ನಡೆಸಿ ತುರ್ತು ಸ್ಪಂದನಾ ತಂಡದ ಉದ್ದೇಶಗಳು, ಚಟುವಟಿಕೆಗಳು, ಮಳೆಗಾಲದಲ್ಲಿ ನಿರ್ವಹಿಸಬಹುದಾದ ಚಟುವಟಿಕೆಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.

ಜೇವರ್ಗಿ ತಾಲ್ಲೂಕಿನ ತುರ್ತು ಸ್ಪಂದನಾ ತಂಡದ ನಾಯಕರಾಗಿ ನಾಗೇಶ್ ಹಾಗೂ ಶ್ರೀ ಶೈಲ ಇವರನ್ನು ಆಯ್ಕೆ ಮಾಡಲಾಯಿತು.
ಜೇವರ್ಗಿ ವಿಪತ್ತು ನಿರ್ವಹಣಾ ಸಮಿತಿಯಲ್ಲಿರುವ 8 ಮಂದಿ ಕ್ರಿಯಾಶೀಲ ಸ್ವಯಂಸೇವಕರನ್ನು ತುರ್ತು ಸ್ಪಂದನಾ ತಂಡಕ್ಕೆ ಆಯ್ಕೆ ಮಾಡಲಾಗಿದ್ದು ಮಳೆಗಾಲದ ಸಂದರ್ಭದಲ್ಲಿ ಉಂಟಾಗಬಹುದಾದ ವಿಪತ್ತುಗಳ ನಿರ್ವಹಣೆಗೆ ಸನ್ನದ್ಧರಾಗಿರಲು ತರಬೇತಿ ನೀಡಲಾಗಿದೆ.
ಈ ತಂಡವು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ, ಅರಣ್ಯ ಮುಂತಾದ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ವಿಪತ್ತು ನಿರ್ವಹಣೆಯಲ್ಲಿ ತೊಡಗಿಕೊಳ್ಳಲಿದೆ.
ಇದೇ ಸಂದರ್ಭದಲ್ಲಿ ಜೇವರ್ಗಿ ವಿಪತ್ತು ನಿರ್ವಹಣಾ ಸಮಿತಿಯ ಕೋರ್ ಕಮಿಟಿ ಸಭೆಯನ್ನು ನಡೆಸಿ ಮಳೆಗಾಲದಲ್ಲಿನ ವಿಪತ್ತು ನಿರ್ವಹಣೆಗೆ ಅಗತ್ಯ ವಿಚಾರಗಳ ಬಗ್ಗೆ ವಿಮರ್ಶೆ ನಡೆಸಿ ಯಾವುದೇ ವಿಪತ್ತುಗಳಿಗೆ ಸ್ಪಂದನೆ ನೀಡುವಂತೆ ಸದಸ್ಯರನ್ನು ಸಿದ್ಧಗೊಳಿಸಲಾಯಿತು.

ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್, ತಾಲ್ಲೂಕು ಯೋಜನಾಧಿಕಾರಿಗಳಾದ ಶ್ರೀ ಮಾಲತೇಶ್, ಜನಜಾಗೃತಿ ಯೋಜನಾಧಿಕಾರಿ ಶ್ರೀ ರಾಜೇಶ್, ಜನಜಾಗೃತಿ ಪ್ರಾದೇಶಿಕ ಮೇಲ್ವಿಚಾರಕರಾದ ಮಲ್ಲೇಶ್, ಶೌರ್ಯ ಸಮಿತಿಯ ಮಾಸ್ಟರ್ ಹಾಗೂ ಕ್ಯಾಪ್ಟನ್, ವಲಯ ಮೇಲ್ವಿಚಾರಕರು, ಸಂಯೋಜಕರು, ಘಟಕಪ್ರತಿನಿಧಿಗಳು ಉಪಸ್ಥಿತರಿದ್ದರು.