
ಬೈಂದೂರು ತಾಲ್ಲೂಕಿನ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಸ್ಥಾನದ ಐತಿಹಾಸಿಕ ಪ್ರಸಿದ್ಧ ಪವಿತ್ರ ತೀರ್ಥಕೆರೆಯ ಸ್ವಚ್ಛತೆಯನ್ನು ಕಂಬದ ಕೋಣೆ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ನಡೆಸಿದರು.
ಪುರಾತನ ಕೆರೆ: ಐತಿಹಾಸಿಕ ಮಹತ್ವವಿರುವ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಸ್ಥಾನದ ಪವಿತ್ರ ತೀರ್ಥಕೆರೆಯು ದೇವಸ್ಥಾನ ಮತ್ತು ಸ್ಥಳೀಯ ಕೃಷಿ ಚಟುವಟಿಕೆಗಳಿಗೆ ನೀರನ್ನು ಒದಗಿಸುತ್ತದೆ. ಪ್ರತಿ ವರ್ಷ ಜಾತ್ರೆಯ ಪ್ರಯುಕ್ತ ಈ ಕೆರೆಯ ಮದ್ಯದಲ್ಲಿ ದೇವರ ಪೂಜೆ ನಡೆಸಲಾಗುತ್ತದೆ. ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸ್ವಚ್ಚತಾ ಶ್ರಮದಾನವನ್ನು ಗ್ರಾಮಸ್ಥರು ಪ್ರತಿ ವರ್ಷ ನಡೆಸುತ್ತಾ ಬಂದಿದ್ದಾರೆ.

ಕೆರೆಯ ಆಳದ ವರೆಗೆ ಸ್ವಚ್ಚತೆ: ಜಾತ್ರೆಯ ಪ್ರಯುಕ್ತಸ್ಥಳೀಯರು ಈ ಕೆರೆಯನ್ನು ಪ್ರತಿ ವರ್ಷ ಸ್ವಚ್ಚ ಮಾಡುತ್ತಾರೆ. ಕೆರೆಯ ಪರಿಸರದಲ್ಲಿ ಕೆರೆಯ ಸುತ್ತಲೂ ಮತ್ತು ನೀರಿನ ಮೇಲ್ಬಾಗದಲ್ಲಿ ಪಾಚಿಯನ್ನು ತೆಗೆಯುವ ಕೆಲಸವನ್ನು ಮಾಡುತ್ತಾರೆ. ಆದರೆ ಕೆರೆಯ ಆಳದ ವರೆಗೆ ಸ್ವಚ್ಚತೆ ಮಾಡಿದ್ದು ಬಹಳ ಕಡಿಮೆ. ಇದರಿಂದಾಗಿ ಸ್ವಯಂಸೇವಕರು ಕೆರೆಯ ಆಳದ ವರೆಗೆ ಸ್ವಚ್ಚತೆ ನಡೆಸಲು ತೀರ್ಮಾನಿಸಿ ಇಡೀ ದಿನ ಸ್ವಚ್ಚತಾ ಶ್ರಮದಾನ ನಡೆಸಿದ್ದಾರೆ.

ಮೆಚ್ಚುಗೆಗೆ ಪಾತ್ರವಾದ ಸೇವೆ: ಸ್ವಯಂಸೇವಕರ ಕೆರೆ ಸ್ವಚ್ಚತೆ ಸೇವೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಬೆಳಿಗ್ಗೆ ಆರಂಭಿಸಿ ಸಂಜೆಯ ವರೆಗೆ ಶ್ರಮದಾನ ನಡೆಸಿದ ಸ್ವಯಂಸೇವಕರು ನೀರಿನ ಮೇಲ್ಬಾಗದಲ್ಲಿ ಸಂಗ್ರಹವಾಗಿದ್ದ ಪಾಚಿಯನ್ನು ಮತ್ತು ನೀರಿನ ಆಳದಲ್ಲಿ ಕಟ್ಟಿಕೊಂಡಿದ್ದ ಪಾಚಿಯನ್ನೂ ತೆರವು ಮಾಡಿದ್ದಾರೆ. ಕೆರೆಯ ಸುತ್ತಲೂ ಗಿಡಗಂಟಿಗಳನ್ನು ತೆಗೆದಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಇವರು ಸ್ವಯಂಸೇವಕರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕೆರೆಯ ಸ್ವಚ್ಚತಾ ಶ್ರಮದಾನದಲ್ಲಿ ಸ್ವಯಂಸೇವಕರಾದ ರಮೇಶ್ ದೇವಾಡಿಗ, ಶ್ರೀನಿವಾಸ್, ರಾಜೇಶ್, ಸಂತೋಷ್, ಸೀನ ದೇವಾಡಿಗ, ಪ್ರದೀಪ, ರಾಮಕೃಷ್ಣ, ಪ್ರೇಮ, ನಿಂಗಮ್ಮ, ಮಾಧವ, ಮಮತಾ ಹಾಜರಿದ್ದು ಶ್ರಮದಾನ ನಡೆಸಿದರು.