ಮಹಾರಾಷ್ಟ್ರದ ಜಲಾಶಯಗಳಿಂದ ಭೀಮಾ ನದಿಗೆ ಅಧಿಕ ಪ್ರಮಾಣದ ನೀರು ಬಿಡುವುದರಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಸೇತುವೆ ಜಲಾವೃತಗೊಂಡು ಭೀಕರ ಪ್ರವಾಹ ಉಂಟಾಗುತ್ತವೆ. ಕಟ್ಟಿಸಂಗಾವಿ ಮತ್ತು ನರಿಬೋಳ ಸಂಪರ್ಕಿಸುವ ಸೇತುವೆಗಳು ಮುಳುಗಡೆಯಾಗಿ ಸುತ್ತಲಿನ ಪ್ರದೇಶಗಳಾದ ಮದರಿ, ಯನಗುಂಟಿ ಹಾಗೂ ನರಿಬೋಳ ಗ್ರಾಮಗಳ ಜತೆಗೆ ಕಷ್ಠಪಡಬೇಕಾಗಿ ಬರುತ್ತದೆ. ಇಲ್ಲಿ ವಾಹನ ಸಂಚಾರ ಕಷ್ಠವಾಗುತ್ತದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತದೆ.

ಕಳೆದ ವರ್ಷದ ಮಳೆಗಾಲದಲ್ಲಿ ಮಹಾರಾಷ್ಟ್ರದ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಇಲ್ಲಿನ ಹಲವಾರು ಗ್ರಾಮಗಳ ರಸ್ತೆಗಳು ಜಲಾವೃತಗೊಂಡು ಇಡೀ ಗ್ರಾಮವೇ ನಡುಗಡ್ಡೆಯಂತಾಗಿತ್ತು. ಸಾರ್ವಜನಿಕರ ಮತ್ತು ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆ ಉಂಟಾಗಿ ತಾಲೂಕು ಆಡಳಿತವು ತಾತ್ಕಾಲಿಕ ದೋಣಿ ವ್ಯವಸ್ಥೆಯನ್ನು ಕಲ್ಪಿಸಿತ್ತು.
ನದಿ ತೀರದ ಬಾಂದಾರಗಳು, ಸೇತುವೆಗಳು ಮುಳುಗಡೆಯಾಗಿ, ನೂರಾರು ಎಕರೆ ಕೃಷಿ ಭೂಮಿ ನಾಶವಾಗಿ ಜಾನುವಾರುಗಳಿಗೆ ತೊಂದರೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸ್ವಯಂಸೇವಕರು ಮುಳುಗಡೆ ಪ್ರದೇಶದಲ್ಲಿರುವ ಮನೆಗಳನ್ನು ಭೇಟಿ ಮಾಡಿ ಜನರಿಗೆ ಪ್ರವಾಹ ಬರುವ ಸಾಧ್ಯತೆಗಳು, ಮುನ್ನಚ್ಚರಿಕೆಯಾಗಿ ಗಮನಿಸಬೇಕಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರವಾಹ ಬರುವ ಮೊದಲೇ ಸರ್ಕಾರ ಘೋಷಿಸಿದ ಕಾಳಜಿ ಕೇಂದ್ರಗಳ ಬಗ್ಗೆ ಮಾಹಿತಿ ಹೊಂದಿರುವುದು. ಮನೆಯಲ್ಲಿರುವ ಅಮೂಲ್ಯ ವಸ್ತುಗಳನ್ನು ಒಂದೆಡೆ ತೆಗೆದು ಇಟ್ಟುಕೊಳ್ಳುವುದು. ಆಭರಣಗಳು, ಹಣ, ಶಾಲಾ ವಿದ್ಯಾಭ್ಯಾಸದ ದಾಖಲೆಪತ್ರಗಳು, ಜಮೀನು ಮನೆಗೆ ಸಂಬಧಿಸಿದ ದಾಖಲೆಪತ್ರಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡು ಪ್ರವಾಹದ ತುರ್ತು ಪರಿಸ್ಥಿತಿಯಲ್ಲಿ ಮನೆ ಬಿಡಬೇಕಾದ ಅನಿವಾರ್ಯತೆ ಬಂದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ.

ಸಾಕು ಪ್ರಾಣಿಗಳ ಸುರಕ್ಷಿತ ಸ್ಥಳಾಂತರ, ವಯೋವೃದ್ಧರು ಮತ್ತು ಮಕ್ಕಳನ್ನು ಜಿಲ್ಲಾಡಳಿತವು ಪ್ರವಾಹ ಮುನ್ನೆಚ್ಚರಿಗೆ ನೀಡಿದ ತಕ್ಷಣ ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ಬಗ್ಗೆ ಮನವರಿಕೆ ಮಾಡಿದರು.
ಹೊಲದಲ್ಲಿ ನದಿಯ ತೀರದಲ್ಲಿ ಅಳವಡಿಸಿದ ಪಂಪುಗಳ ತೆರವು, ಪ್ರವಾಹದ ಸಮಯದಲ್ಲಿ ನದಿಗೆ ಇಳಿಯದಂತೆ ಮಾಹಿತಿಯನ್ನು ನೀಡಿರುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿಪತ್ತುಗಳ ನಿರ್ವಹಣೆಗಾಗಿ ಶೌರ್ಯ ವಿಪತ್ತು ನಿರ್ವಹಣಾ ತಂಡವನ್ನು ರಚನೆ ಮಾಡಿದ್ದು ಈ ತಂಡಗಳು ಅಗ್ನಿಶಾಮಕ ದಳದಿಂದ ತರಬೇತಿಯನ್ನು ಪಡೆದುಕೊಂಡು ಕಳೆದ ಮೂರು ವರ್ಷಗಳಿಂದ ಕಾರ್ಯಾಚರಿಸುತ್ತಿವೆ. ಯಾವುದೇ ಸಮಸ್ಯೆಗಳು ಉಂಟಾದಲ್ಲಿ ಘಟಕದ ಸ್ವಯಂಸೇವಕರನ್ನು ಸಂಪರ್ಕಿಸುವಂತೆ ದೂರವಾಣಿ ಸಂಖ್ಯೆಯನ್ನು ನೀಡಿ ಬಂದಿರುತ್ತಾರೆ.

ಜೇವರ್ಗಿ ತಾಲ್ಲೂಕಿನಲ್ಲಿ ಗಂವ್ವಾರ, ಇಚೇರಿ ನಂದಿಹಳ್ಳಿ, ಜೇರಟಗಿ, ಕಟ್ಟಿಸಂಗಾವಿ, ಅರಳಗುಂಡಗಿ, ಮಳ್ಳಿ, ಕಾಸರಬೋಸ್ಗ, ಕೆಲ್ಲೂರು, ಯಡ್ರಾಮಿ ಗ್ರಾಮಗಳಲ್ಲಿ ವಿಪತ್ತು ನಿರ್ವಹಣಾ ಘಟಕಗಳನ್ನು ರಚಿಸಲಾಗಿದೆ. ಜೇವರ್ಗಿ ತಾಲ್ಲೂಕಿನಲ್ಲಿ 9 ಶೌರ್ಯ ಘಟಕಗಳಿದ್ದು 130 ಮಂದಿ ಸ್ವಯಂಸೇವಕರು ಘಟಕಗಳಲ್ಲಿದ್ದಾರೆ.
ಅಗ್ನಿಶಾಮಕದಳ ಮತ್ತು ಪರಿಣಿತರಿಂದ ತರಬೇತಿ ಪಡೆದಿರುವ ಶೌರ್ಯ ಸ್ವಯಂಸೇವಕರು ವಿಪತ್ತು ನಿರ್ವಹಣಾ ಸೇವೆಗಳು ಹಾಗೂ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ. ಜಿಲ್ಲಾ ನಿರ್ದೇಶಕರಾದ ಶ್ರೀ ವಸಂತ್ ಬಿ. ರವರ ಮಾರ್ಗದರ್ಶನದಲ್ಲಿ ತಾಲ್ಲೂಕು ಯೋಜನಾಧಿಕಾರಿಯವರಾದ ಶ್ರೀ ಮಾಲತೇಶ್ ರವರ ನೇತ್ರತ್ವದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡವು ಸಕ್ರೀಯವಾಗಿದೆ.

ಸಂಪರ್ಕಿಸಲು:
- ಶ್ರೀ ವಸಂತ್ ಬಿ- ನಿರ್ದೇಶಕರು-9448709717
- ಶ್ರೀ ಮಾಲತೇಶ್, ಯೋಜನಾಧಿಕಾರಿಗಳು-8310056221
- ಶ್ರೀ ಜೈವಂತ ಪಟಗಾರ್, ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯೋಜನಾಧಿಕಾರಿ-9686527633