ಚಿಂಚೋಳಿ ತಾಲ್ಲೂಕಿನ ಚಂದಾಪುರ ಗ್ರಾಮದ ವಾಲ್ಮೀಕಿ ದೇವಸ್ಥಾನ ಹತ್ತಿರದಲ್ಲಿ ಸಂಗ್ರಹಿಸಿಟ್ಟ ದನದ ಮೇವಿನ ಬಣವೆ, ಕಟ್ಟಿಗೆ ರಾಶಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ 31.05.2026 ರಂದು ನಡೆಯಿತು.

ದೇವಸ್ಥಾನದ ಸಮೀಪ ಅನೇಕ ಮನೆಗಳು ಇದ್ದುದರಿಂದ ಸುತ್ತಲಿನ ಜನರು ಆತಂಕಗೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಪಂದಿಸಿದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಅಗ್ನಿಶಾಮಕ ದಳ ಬರುವ ಮುನ್ನ ಬೆಂಕಿ ಹೊತ್ತಿಕೊಂಡ ಪ್ರದೇಶದಲ್ಲಿದ್ದ ಸ್ವಯಂಸೇವಕರು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರು. ಸುತ್ತಲೂ ಮನೆಗಳ ಸಂಖ್ಯೆ ಜಾಸ್ತಿ ಇರುವುದರಿಂದ ಬೆಂಕಿ ವ್ಯಾಪಕವಾಗಿ ಹರಡುವ ಅಪಾಯವಿತ್ತು. ಆದರೆ ಸ್ಥಳೀಯರು ಮತ್ತು ಶೌರ್ಯ ಸ್ವಯಂಸೇವಕರ ಸಮಯಪ್ರಜ್ಞೆಯಿಂದ ಭಾರಿ ಅಪಾಯ ತಪ್ಪಿದಂತಾಗಿದೆ.

ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿ ಕಾರ್ಯಾಚರಣೆಯಲ್ಲಿ ಸಹಕಾರ ನೀಡಿದ ಸ್ವಯಂಸೇವಕರಿಗೆ ಅಗ್ನಿಶಾಮಕ ಠಾಣಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಶೌರ್ಯ ವಿಪತ್ತು ನಿರ್ವಹಣಾ ಘಟಕ ಚಂದಾಪುರ ಇದರ ಸ್ವಯಂಸೇವಕರಾದ ರಾಘವೇಂದ್ರ, ಬಸಯ್ಯ, ಮಲ್ಲಿನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.